Swaagatam

स्वागतम्

Friday, April 4, 2008

ಚೀನಾದ ಸೊಕ್ಕು : ಜಗತ್ತಿನ ಛಾವಣಿಯ ಹಕ್ಕು

೧೯೪೭ರ ಅಕ್ಟೋಬರ್ ೨೬ ರಂದು ಜಮ್ಮು ಕಾಶ್ಮೀರದ ರಾಜಾಧಿರಾಜ ಮತ್ತು ಟಿಬೇಟ್‌ನ ನರೇಶ ಹಾಗೂ ಆದಿದೇಶಾಧಿಪತಿಯಾದ ಹರಿ ಸಿಂಗ್‌ರವರು ತಮ್ಮ ರಾಜ್ಯ ಒಪ್ಪಿಸುವ ಪತ್ರವನ್ನು ನೀಡಿದರು. ಭಾರತದ ಆಗಿನ ಗವರ್ನರ್ ಜನರಲ್ ಲೂಯಿಸ್ ಮೌಂಟ್‌ಬ್ಯಾಟನ್‌ರು ಅದನ್ನು ಮರುದಿನವೇ ಅಂಗೀಕರಿಸಿದರು. ಅಚ್ಚರಿಯ ಸಂಗತಿಯೆಂದರೆ - ಇದು ಅನ್ವಯಿಸಿದುದು ಜಮ್ಮು-ಕಾಶ್ಮೀರಕ್ಕೆ ಮಾತ್ರ. ಟಿಬೆಟ್‌ನ ಬಗೆಗೆ ಗಹನವಾದ(ಜಾಣ) ಮೌನವನ್ನು ವಹಿಸಲಾಯಿತು.

ಇನ್ನೂ ಸ್ಫುಟವಾಗಿ ಹೇಳಬೇಕೆಂದರೆ ಆ ರಾಜನು ಭಾರತಕ್ಕೆ ತನ್ನ ಪ್ರದೇಶವನ್ನು ಒಪ್ಪಿಸಿದಾಗ ಅಲ್ಲೊಂದು ಶೂನ್ಯವನ್ನು ಸೃಷ್ಟಿಸಿದನು. ಟಿಬೆಟ್‌ನ ನರಮೇಧಕ್ಕೆ ಕಾರಣರಾದ ಫ್ರಾನ್ಸಿಸ್ ಯಂಗ್‌ಹಸ್ಬೆಂಡ್ ನಾಲ್ಕು ದಶಕಗಳ ಹಿಂದೆ ಗೆದ್ದ ಆ ಭೂಭಾಗವನ್ನು ಪಶ್ಚಿಮದವರು ಪಡೆಯಲು ಮೌಂಟ್‌ಬ್ಯಾಟನ್‌ರು ಸಹಾಯಮಾಡಲಿ ಎಂಬುದು ಅವರ ಉದ್ದೇಶವಾಗಿತ್ತು. ವಿಚಿತ್ರವೆಂದರೆ, ಹರಿಸಿಂಗ್ ಹೇಗೆ ಟಿಬೆಟ್ ನರೇಶ! ಆದ ಎಂಬುದೇ. ನಾನು ಅಂತಹ ಯಾವುದೇ ಭಾರತೀಯ ಇತಿಹಾಸ, ವ್ಯಾವಹಾರಿಕ ವೃತ್ತಾಂತ ಅಥವಾ ಕುಶಲ ವಿಶ್ಲೇಷಣೆಯನ್ನು ಕಂಡಿಲ್ಲ. ಆದರೆ, ಈಗ ಸ್ಪಷ್ಟವಾಗುವ ವಿಷಯವೆಂದರೆ ಪಾಕಿಸ್ಥಾನವು ಉದಯಿಸಿದ್ದು ಗಲ್ಫ್ ಅಥವಾ ಅಪ್ಘಾನಿಸ್ತಾನವನ್ನು ವೀಕ್ಷಿಸಲಲ್ಲ. ಬದಲಾಗಿ ಸೋವಿಯತ್ ಒಕ್ಕೂಟ ಮತ್ತು ಕಮ್ಯುನಿಷ್ಟ್ ಚೈನಾಗಳ ಹಿಡಿತವನ್ನು ಪಡೆಯಲು ಟಿಬೇಟ್‌ನ ತಪ್ಪಲಿಗೆ ದಾರಿಯಾಗಲಿ ಎಂದು.

ಜಮ್ಮು ಕಾಶ್ಮೀರವು ಪಾಕಿಸ್ಥಾನದಂತೆ ಈ ಆಟದಲ್ಲಿ ದಾಳವಾಗಿತ್ತು. ಅದು ಮಹಮ್ಮದಾಲಿ ಜಿನ್ನಾರವರಿಗೆ ಕೊಡಲ್ಪಡಲಿಲ್ಲ. ಏಕೆಂದರೆ, ಸ್ವತಂತ್ರವಾದ ದೊಡ್ಡ ಪಾಕಿಸ್ಥಾನವು ಬ್ರಿಟಿಷರಿಗೆ ತಲೆನೋವಾದೀತು. ಆದ್ದರಿಂದ, ಅವು ಪಶ್ಚಿಮವನ್ನವಲಂಬಿಸುವ ಎರಡು ರೆಕ್ಕೆಗಳಾಗಿ ಮೂಡಿಬಂದವು. ಕಾಶ್ಮೀರದ ವಿಷಯದಲ್ಲಿ ರಾಜ್ಯಪ್ರಾಪ್ತಿಯ ಕ್ರಮವನ್ನು ನೆಹರುರವರು ಸರ್ದಾರ್ ಪಟೇಲರಿಂದ ಕಸಿದುಕೊಂಡರು. ಮತ್ತು ಬುದ್ಧಿಪೂರ್ವಕವಾಗಿ ಟಿಬೆಟ್ಟನ್ನು ಕೈಬಿಡಲಾಯಿತು. ಕೆಲವು ತಿಂಗಳುಗಳ ನಂತರ ಪಾಕಿಸ್ಥಾನವು ಜಮ್ಮ-ಕಾಶ್ಮೀರವನ್ನು ಆಕ್ರಮಿಸಿದಾಗ, ಮೌಂಟ್‌ಬ್ಯಾಟನ್‌ರು ಈ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ(ಪ್ರೇರಿಸಿ) ತಾವೇ ಅದನ್ನು ಮಾಡಿಸಿದರು. ಇದು ಉತ್ತರಭಾಗದ ಒತ್ತುವರಿಗೆ ಮತ್ತು ಟಿಬೆಟನ್ನು ನಿಗ್ರಹಿಸಲು ಸಾಕಾಯಿತು.

ವಿಶ್ವಸಂಸ್ಥೆಯ ಮಿಲಿಟರಿ ಅಬ್ಸರ್ವರ್ ಗುಂಪು ಭಾರತ ಮತ್ತು ಪಾಕಿಸ್ಥಾನದ ಗಡಿರೇಖೆಯನ್ನು ಅದಲುಬದಲು ಮಾಡಲು (ಬದಲಾಯಿಸಲು) ಮುಂದಾದಾಗ ನೆಹರುರವರಿಗೆ ತಾವು ಮೋಸಹೋದ (ನಿಜಸ್ಥಿತಿಯ) ಅರಿವಾಯಿತು. ಅದರಿಂದಲೇ ಅವರು ಜಮ್ಮು-ಕಾಶ್ಮೀರದ ಜನಮತ ತೆಗೆದುಕೊಳ್ಳುವ ನಿರ್ಣಯವನ್ನು ಪ್ರಬಲವಾಗಿ ವಿರೋಧಿಸಿದರು. ವಸಾಹತುಶಾಯಿಯಿಂದ ಮುಕ್ತಾವಾಗಿ, ಸ್ವಾಂತಂತ್ರ್ಯವೇನೂ ಸಿಕ್ಕಿರಲಿಲ್ಲ. ಬದಲಾಗಿ ಹೊಸ ವಸಾಹತುಶಾಯಿ ಸೃಷ್ಟಿಯಾಗಿತ್ತೆಂಬ ಕಟುಸತ್ಯದ ಅರಿವಾಗಿ ತಕ್ಷಣ ಸೋವಿಯತ್ ಒಕ್ಕೂಟ ಮತ್ತು ಚೈನಾದ ಕಡೆಗೆ ವಾಲಿದರು.

ಪಶ್ಚಿಮದ ಹೊಸ ವಸಾಹತುಶಾಹಿಯು ವಿಶ್ವದ ಬೇರೆ ಕಡೆಗಳಿಗೂ ಹರಡತೊಡಗಿತು. ಆದ್ದರಿಂದಲೇ, ತ್ವರಿತವಾಗಿ ರಷಿಯಾವು ಬಾಲ್ಟಿಕ್ ಮತ್ತು ಬಾಲ್ಟನ್ ದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಲಿಪ್ತರಾಷ್ಟ್ರಗಳ ಒಕ್ಕೂಟದ ಕಲ್ಪನೆಯು ಯುಗೋಸ್ಲಾವಿಯಾದ ಜೋಸಿಪ್ ಟಿಟೋ ಅವರದು. ಆದರೂ ಅವರು ಈ ಕಲ್ಪನೆಯನ್ನು ತಮ್ಮದೆಂದು ಹೇಳಿಕೊಳ್ಳದೇ ಇಜಿಪ್ಟ್‌ನ ಅಧ್ಯಕ್ಷ ನಾಸರ್ ಮತ್ತು ನೆಹರೂ ಅವರದೂ ಅದರಲ್ಲಿ ಪಾಲಿದೆಯೆಂದು ಉದಾರಿಯಾದರು. ಅವರ ಉದ್ದೇಶವಾದರೋ ಕಮ್ಯೂನಿಸಂ ರಹಿತ ದೇಶಗಳನ್ನು ಪಶ್ಚಿಮೇತರ ವಲಯದೊಳಗೆ ಸೇರಿಸುವುದೇ ಆಗಿತ್ತು. ಕಾರ್ಯದರ್ಶಿ ಮಾವೋರವರು ಬಹುಶಃ ರಶಿಯಾದಿಂದ ಪ್ರೇರಿತರಾಗಿ ಲ್ಹಾಸಾದಲ್ಲಿ ಪಶ್ಚಿಮದ ಪ್ರಭುತ್ವವನ್ನು ಕೊನೆಗೊಳಿಸಲು ಆಗ್ರಹಿಸಿದರು.

ಅದೊಂದು ಬುದ್ಧಿವಂತ ಎಚ್ಚರಿಕೆಯಾಗಿತ್ತು. ಟಿಬೇಟ್ ದೊಡ್ಡ ದೇಶ. ಅದರ ಗಡಿಗಳು ಮ್ಯಾನ್ಮಾರ್, ಭೂತಾನ್, ನೇಪಾಳ್, ಸಿಕ್ಕಮ್ ಮತ್ತು ಭಾರತದವರೆಗೆ ಹರಡಿವೆ. ಚೈನಾದೊಂದಿಗಿನ ಅವರ ಗಡಿಯಂತೂ ಅತ್ಯಂತ ದೊಡ್ಡದು. ಬೀಜಿಂಗ್‌ನಲ್ಲಿನ ಯಾವುದೇ ಸರ್ಕಾರವು(ಅದರ ಸಿದ್ಧಾಂತ ಯಾವುದೇ ಆಗಿರಲಿ) ವೈರಿಪಡೆಯ ಅಂತಹ ಸಾಮೀಪ್ಯವನ್ನು ಬಯಸುವುದಿಲ್ಲ(ಸಹಿಸುವುದಿಲ್ಲ). ಪಾಕಿಸ್ಥಾನದ ಸಹಾಯದೊಂದಿಗೆ ಚೈನಾ ನಿರ್ಮಿಸಿದ ಕರಕೋರಂ ಹೈವೇ ಭಾರತವನ್ನತಿಕ್ರಮಿಸಲಷ್ಟೇ ಅಲ್ಲದೇ ಪಶ್ಚಿಮದಿಂದ ಪೀಡಿತವಾದ ಗಲ್ಫ್ ಮತ್ತು ಅಪ್ಘಾನಿಸ್ತಾನವನ್ನು ಪಡೆಯಲೇ ಆಗಿತ್ತು. ಅದರ ಇರಾನ್ ಜತೆಗಿನ ಸ್ನೇಹವೂ ಲ್ಹಾಸಾದ ಅಶಾಂತಿಗೆ ಕಾರಣ. ನನ್ನ ಪ್ರಕಾರ ಕಾಶ್ಮೀರದ ಪ್ರದೇಶವು ತಮ್ಮ(ಭಾರತದ) ಹಿಡಿತದಲ್ಲಿದ್ದನ್ನು ಮನಗಂಡ ನೆಹರೂರವರು ಅದರಾಚೆಗೆ ಹೋಗಲು ಸಾಧ್ಯವಾಗದ ಕಾರಣ ಅದನ್ನು ಚೀನಾ, ರಶಿಯಾಗಳಿಗೆ ಬಿಟ್ಟುಕೊಟ್ಟರು. ಅದು ಅತ್ಯಂತ ಕುಟಿಲ ರಾಜಕೀಯವಾಗಿತ್ತು. ಅದರ ಉದ್ದೇಶ - ಏಷಿಯಾದ ಪ್ರಭುತ್ವ ಏಷಿಯನ್ನರ ಕೈಯಲ್ಲೇ ಇರಲೆಂಬುದಾಗಿತ್ತು. ಅದರ ಅವಗುಣಗಳು ಏನೇ ಆಗಿರಲಿ ಅಬ್ರಹಾಂನ ಮಕ್ಕಳಿಗಿಂತ ಸ್ವರ್ಗದ ಮಕ್ಕಳು ಹೆಚ್ಚು ಸ್ವೀಕಾರಾರ್ಹರಾಗಿದ್ದರು.

ವಿಶ್ಲೇಷಕರ ಪ್ರಕಾರ ಡ್ರೆಪಂಗ್ ಆಶ್ರಮದ ಸನ್ಯಾಸಿಗಳು ಆಲ್ ಚೈನಾ ಅಸೆಂಬ್ಲಿ ಆಫ್ ಪೀಪಲ್ಸ್ ರೆಪ್ರೆಸೆಂಟೇಟಿವ್ಸ್‌ನ ಜೊತೆಗೆ ಐಕಮತ್ಯವನ್ನು ಹೊಂದಿದ್ದರು. ಇದರಿಂದ ಮುಜುಗರಗೊಂಡ ಚೈನಾ ಅದರ ವಿರುದ್ಧ ಸಮರ ಸಾರಿತು. ಟಿಬೇಟ್ ಆಧಿಪತ್ಯದ ಘನ್ಸು, ನೆಚುಲಿನ್ ಮತ್ತು ಕ್ವೆಂಘೈಗಳ ಪ್ರತಿಭಟನೆಗಳು ಪೂರ್ವಯೋಜಿತವಾಗಿದ್ದವು. ಹಿಂದೆ ೧೯೯೮ರಲ್ಲಿ ನ್ಯಾಟೋ ಘರ್ಷಣೆಗೆ ಮೊದಲು ಕೊಸೊವೋನನ್ನು ಪಶ್ಚಿಮದ ಮಾಧ್ಯಮಗಳು ಸುತ್ತುವರಿದಂತೆ, ಈಗಲೂ ನಡೆದಿದೆ. ಅವರಿಗೆ ವಿಷಯಗಳು ತಲುಪುವುದು ಸುತ್ತಲಿನ ದೇಶಗಳ ಟಿಬೇಟ್ ಮೂಲನಿವಾಸಿಗಳು ಮತ್ತು ಪಶ್ಚಿಮ ಮಾನವ ಹಕ್ಕುಗಳ ಎನ್‌ಜಿಓಗಳಿಂದ.

ಕೌತುಕದ ವಿಷಯವೆಂದರೆ ಭಾರvದಿಂದ ಸಿಲಿಕಾನ್ ವ್ಯಾಲಿಯ ತಂತ್ರಜ್ಞರಾದ ಯೆಹೆಲ್ ಬೆನ್‌ಡೇವಿಡ್ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ನಿಗಮಗಳ ಹಿನ್ನೆಲೆಯುಳ್ಳ ಮೈಕಲ್ ಜಂಗಲ್ಡ್ ಎಂಬ ಇಬ್ಬರು ಇಸ್ರೇಲಿUಳಿಗೆ ೨೦೦೫ರಿಂದ ಧರ್ಮಶಾಲಾದಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಯಿತು. ಅವರ ಕೆಲಸವೆಂದರೆ ಅಲ್ಲಿನ ೨೦೦೦ ಕಂಪ್ಯೂಟರ್‌ಗಳ ಮಧ್ಯದ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಬ್ರಾಡ್ ಬ್ಯಾಂಡ್ ಇಂಟರ್ ನೆಟ್, ವಯ್ಸ್ ಓವರ್ ಇಂಟರ್‌ನೆಟ್ ಪ್ರೋಟೋಕಾಲ್ ಟಲಿಫೋನ್ ಸರ್ವೀಸಸ್ ಮತ್ತು ವೀಡಿಯೋ ಕಾನ್ಫರೆನ್ಸ್. ಅಶಾಂತತೆಯ ಬಗೆಗಿನ ವಾರ್ತೆಯನ್ನು ಟಿಬೇಟ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ & ಡೆಮಾಕ್ರಸಿ ಪ್ರಸಾರ ಮಾಡಿಸಿದವರು ವಿಶ್ವಸಂಸ್ಥೆಯ ವ್ಯವಹಾರಗಳ ಸದಸ್ಯರಾದ ತೆನ್‌ಸಿಂಗ್ ನಾರ್ಗೆಯವರು.

ದಲಾಯಿಲಾಮಾರನ್ನು ಅಕ್ಟೋಬರ್ ೨೦೦೭ರ ಅಮೆರಿಕಾದ ಕಾಂಗ್ರೆಸ್‌ನ ಚಿನ್ನದ ಪದಕವನ್ನು ಪಡೆದ ಹಿನ್ನೆಲೆಯಲ್ಲಿ ಟಿಬೇಟ್‌ಅನ್ನು ನೋಡಬೇಕು. ೧೯೯೬ರ ನೋಬೆಲ್ ಶಾಂತಿಪುರಸ್ಕಾರವನ್ನು ಪಡೆದ ಪೂರ್ವ ತೈಮೂರ್‌ನ ಕ್ಯಾಥೋಲಿಕ್ ಬಿಷಪ್ ಕಾರ್ಲೋಸ್ ಬೆಲೋ ಮತ್ತು ಪಕ್ಷತ್ಯಾಗಿ ಅನಿವಾಸಿ ನಾಯಕ ಜೋಸ್ ರಾಮೋಸ್ ಹೋರ್ಟಾಗೆ ಸಂದ ಪ್ರಶಸ್ತಿಯೂ ಸಹ. ೧೯೯೮ರಲ್ಲಿ ನಡೆದ ಅಮೆರಿಕಾದ ಕ್ಯಾಥೋಲಿಕ್ ಬಿಷಪ್ ಗಳ ಸಮ್ಮೇಳನದಲ್ಲಿ ಬಿಷಪ್ ಬೆಲೋರವರಿಗೆ ಶಾಂತಿಪುರಸ್ಕಾರವನ್ನು ನನಸಾಗಿಸಲು ಪ್ರಮಾಣ ಮಾಡಿಸಲಾಯಿತು ಮತ್ತು ಅದರ ಇನ್ನೊಂದು ಪ್ರತಿಯನ್ನು ಅಮೆರಿಕಾದ ರಾಜ್ಯ ಸಚಿವರಾದ ಮೆಡಲಿನ್ ಅಲ್ ಬ್ರೈಟ್‌ರವರಿಗೆ ಕಳುಹಿಸಲಾಯಿತು ! ಕೆಲವು ತಿಂಗಳುಗಳ ನಂತರ ದಂಗೆಗಳು ಮೊದಲಾದಾಗ ವಿಶ್ವಸಂಸ್ಥೆಯು ಪೂರ್ವ ತೈಮೂರ್ ಗೆ ಸ್ವಾಯತ್ತತೆಯನ್ನು ಜನಮತದ ಮೂಲಕ ಆಗ್ರಹಿಸಿತು. ದಂಗೆಗಳು ಹೆಚ್ಚಾದಾಗ ಆಗಸ್ಟ್ ೧೯೯೯ರಲ್ಲಿ ವಿಶ್ವಸಂಸ್ಥೆಯಿಂದ ಪ್ರೇರಿತವಾದ ಜನಮತವು ಸ್ವಾತಂತ್ರ್ಯದ ಪರ ಮತ ಚಲಾಯಿಸಿತು.

ಈಗ, ದಲಾಯಿಲಾಮಾರು ಸಾಂಸ್ಕೃತಿಕ ಮಾರಣಹೋಮದ ತನಿಖೆಗೆ ಮುಂದಾಗುವ ಮೂಲಕ ತಮ್ಮ ಅಮೆರಿಕನ್ ಮಿತ್ರರನ್ನು ಅನುಗ್ರಹಿಸಿದ್ದಾರೆ. ಮತ್ತು ಐದು ದಶಕಗಳಿಂದ ಅವರಿಗೆ ಆಶ್ರಯವನ್ನು ನೀಡಿದ ಭಾರತವನ್ನು ಚೀನಾದೆಡೆಗಿನ ಹೇಡಿತನಕ್ಕೆ ಜರೆದಿದ್ದಾರೆ ! ಅಮೆರಿಕಾದ ಕೈವಾಡವು ೧೯೪೯ರ ಟಿಬೇಟ್, ಹಮಂಡ್ ಮತ್ತು ಅಮ್ಡೋಗಳನ್ನು ವಶಪಡಿಸಿಕೊಂಡನಂತರದ ಸಿಐಏನ ರಹಸ್ಯ ಯುದ್ಧದಷ್ಟು ಹಳೆಯದು. ೧೯೫೭ರ ಅಕ್ಟೋಬರ್ ನಲ್ಲಿ ಸಿಐಏನಿಂದ ತರಬೇತಿ ಪಡೆದ ಟಿಬೇಟಿಯನ್ನರನ್ನು ವಿಮಾನದ ಮೂಲಕ ಢಾಕಾದಿಂದ ಲ್ಹಾಸಾದವರೆಗೆ ಸ್ಥಾನೀಯ ರಜದ್ರೋಹಿಗಳೊಡನೆ ಮಾತನಾಡಲು ಕರೆತರಲಾಯಿತು. ದಲಾಯಿಲಾಮಾರ ಪಲಾಯನದ ನಂತರ ಬಹಳ ಬೇಗ ರಾಜ್ಯವಿಪ್ಲವವು ಆರಂಭವಾಯಿತು.

ಕೋಲೋರಾಡೋದಲ್ಲಿ ನೂರಾರು ಟಿಬೇಟಿಯನ್ನರಿಗೆ ತರಬೇತಿ ನೀಡಲಾಯಿತು. ೧೯೫೮ರಲ್ಲಿ ಸಿಐಏ ಶಸ್ತ್ರಾಸ್ತ್ರ ಮತ್ತು ತರಬೇತಿ ಪಡೆದ ಸೈನಿಕರನ್ನು ಥೈಲ್ಯಾಂಡ್ ನ ಗುಪ್ತಸ್ಥಳದಿಂದ ಕರೆಸಿಕೊಂಡಿತು. ೧೯೬೦ರ ಆರಂಭದಲ್ಲಿ ಸಿಐಏ ವಾರ್ಷಿಕ ೧.೭ ಮಿಲಿಯನ್ ಡಾಲರ್ ಗಳನ್ನು ಟಿಬೇಟ್ ನಲ್ಲಿ ಮತ್ತು ೧೮೦ ಸಾವಿರ ಡಾಲರ್ ಗಳನ್ನು ದಲಾಯಿಲಾಮಾರ ವೈಯಕ್ತಿಕ ಆವಶ್ಯಕತೆಗಳಿಗಾಗಿ ಖರ್ಚು ಮಾಡಿತು. ಅಮೆರಿಕಾದ ಸೈನ್ಯವು ಟಿಬೇಟ್ ನಲ್ಲಿ ಸೈನ್ಯದ ಕಾಲಿರಿಸುವಿಕೆಯಲ್ಲಿ ಸಫಲವಾದರೆ ರಶಿಯಾವು ಚೈನಾದ ಏಕತೆಗೆ ವಿಶೇಷವಾಗಿ ಗ್ಸಿಯಾಂಗ್‌ಯಂಗ್ ಮತ್ತು ಒಳ ಮಂಗೋಲಿಯಾಗಳ ಮೇಲೆ ಹೆಚ್ಚಿನ ಒತ್ತಡ ಹೇರಲು ಬಯಸಿದೆ.

ವರದಿಗಳ ಪ್ರಕಾರ ಟಿಬೇಟಿಯನ್ ಮಿತ್ರರು ಜೂನ್ ೨೦೦೭ರಲ್ಲಿ ದೆಹಲಿಯಲ್ಲಿ ಭೇಟಿಯಾದರು. ಭಾರತ ಮತ್ತು ನೇಪಾಳದಲ್ಲಿ ರಹಸ್ಯವಾಗಿ ವಾಸವಾಗಿರುವ ಟಿಬೇಟಿಯನ್ನರ ನಡಿಗೆಯನ್ನು ಲ್ಹಾಸಾಕ್ಕೆ ಓಲಿಂಪಿಕ್ ಕ್ರೀಡೆಗಳ ಉದ್ಘಾಟನೆಗೆ ಸರಿಯಾಗಿ ಆಯೋಜಿಸಲಾಗಿತ್ತು. ಹಿಂದೆ ಸೋವಿಯತ್ ಒಕ್ಕೂಟದ ವರ್ಣರಂಜಿತ ಕ್ರಾಂತಿಗೆ ಕಾರಣರಾಗಿದ್ದ ಪೌಲಾ ಡೋಬ್ರಿಯಾನ್ಸ್ಕಿ ದಲಾಯಿಲಾಮಾರನ್ನು ಧರ್ಮಶಾಲಾದಲ್ಲಿ ಕಳೆದ ನವೆಂಬರ್ ನಲ್ಲಿ ಭೇಟಿಯಾದರು. ಇತ್ತೀಚೆಗೆ ಅವರು ಅಮೆರಿಕಾ ಕಾಂಗ್ರೆಸ್‌ನ ವಕ್ತಾರರಾದ ನ್ಯಾನ್ಸಿ ಪೆಲೋಸಿ ಅವರನ್ನು ಭೇಟಿಯಾದರು. ಅವರು ರಾಜನೀತಿಜ್ಞನಂತೆ ವರ್ತಿಸುತ್ತಿರುವುರಿಂದ ಮತ್ತು ಭಾರತದ ರಾಜಕಿಯದಲ್ಲಿ ಭಾಗವಹಿಸುತ್ತಿರುವುದರಿಂದ, ಅವರನ್ನು ತಮ್ಮವರೊಂದಿಗೆ ವಾಸಮಾಡಲು ಆಗ್ರಹಿಸಬೇಕು.

(ಆಂಗ್ಲ ಮೂಲ - ಸಂಧ್ಯಾ ಜೈನ್)